ಮಹಾಭಾಯಕನಿಗೆ ಹೀಗೇಕೆ ಅವಮಾನ ಮಾಡಿದ್ರು ಕಿಡಗೇಡಿಗಳು?
ಡಾ. ಅಂಬೇಡ್ಕರ್ ಗೆ ಅಪಮಾನ :
ಸಿಎಂ ಸಿದ್ದರಾಮಯ್ಯ ಕ್ಷೇತ್ರದ
ವಾಜಮಂಗಲದಲ್ಲಿ ನೀಚ ಕೃತ್ಯ
ಮೈಸೂರು : ಮಹಾನ್ ಮಾನವತಾವಾದಿ, ವಿಶ್ವ ಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಮೈಸೂರು ತಾಲೂಕು ವಾಜಮಂಗಲ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಅವರ
ಭಾವಚಿತ್ರ, ಫ್ಲೆಕ್ಸ್ ಗಳಿಗೆ ಚಪ್ಪಲಿ ಹಾರ ಹಾಕಿ, ಮಲ ಎರಚಿ, ನೀಲಿ ಧ್ವಜಗಳನ್ನು ಹರಿದು ವಿಕೃತಿ ಮೆರೆದಿರುವ ದುರ್ಘಟನೆ ಇಂದು ಜರುಗಿದೆ.
ಶುಕ್ರವಾರ ಮಧ್ಯರಾತ್ರಿ ಕಳೆದು ಇಂದು ಮುಂಜಾನೆ 3ರ ನಡುವೆ ಈ ಕೃತ್ಯ ನಡೆದಿದ್ದು ವಾಜಮಂಗಲ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾ ವ್ಯಾಪ್ತಿಗೆ ಬರುವ ವಾಜಮಂಗಲದಲ್ಲಿ ಈ ಕೃತ್ಯ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಏಪ್ರಿಲ್ 14 ರಂದು ಇಲ್ಲಿನ ಸಿದ್ಧಾರ್ಥ ಯುವಕರ ಸಂಘವು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಆಚರಿಸಿ, ಮೆರವಣಿಗೆ, ಅನ್ನದಾನ ಕಾರ್ಯಕ್ರಮ ಜರುಗಿತ್ತು.
ಈ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಡಾ. ಅಂಬೇಡ್ಕರ್ ಅವರ ಫ್ಲೆಕ್ಸ್, ಕಟೌಟ್ ಗಳನ್ನು ಹರಿದು, ಮಲ ಎರಚಿ ವಿಕೃತ ಮೆರೆಯಲಾಗಿದೆ. ನೀಲಿ ಧ್ವಜಗಳನ್ನು ಹರಿದು ಹಾಕಲಾಗಿದೆ. ನೀಚರ ಈ ಕೃತ್ಯದಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಬೀದಿಗಿಳಿದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ.
Comments
Post a Comment